ನನ್ನೊಳಗಿರುವ ನಾನು
ಈ ೫(ಐದು) ದಿನಗಳ ಯಾಂತ್ರಿಕ ಜೀವನದಿಂದ ಮುಕ್ತಿ ಸಿಗುವುದು ಈ ಎರಡು ದಿನಗಳಲ್ಲಿ. ಒಂದು ದಿನ ನಿದ್ದೆ, ನೆನಪು, ಮೌನ -ಮಾತುಗಳಲ್ಲಿ ಕಳೆದರೆ ಮತ್ತೊಂದು ದಿನ ಕೆಲವು ಪುಸ್ತಕಗಳ ನಡುವೆ ಮತ್ತೆ ಸಂಜೆಯು ಸಣ್ಣ ಕಾಲ್ನಡಿಗೆಯಲ್ಲಿ (ನರಸಿಂಹರಾಜ ಕಾಲೋನಿಯಿಂದ ಗಾಂಧಿ ಬಜಾರ್ ತನಕ)ಮುಗಿಯುವುದು ರೂಢಿ. ಯಾರಾದರು ಜೊತೆಗಿರುತ್ತಾರೆ. ಇಲ್ಲದಿರುವುದೇ ಅಪರೂಪ.
ಅದು ಮುಸ್ಸಂಜೆ ಹೊತ್ತು. ಮತ್ತ್ಯಾರು ಇಲ್ಲದ ಕಾರಣ ನಾನು ಮತ್ತು ನಾನು (ನನ್ನೊಳಗಿರುವ ನಾನು) ಜೊತೆಯಾಗಿ ಹೊರಟೆವು...ಯಾವಾಗಲೂ ನನ್ನೊಂದಿಗೆ ಜಗಳವಾಡುತ್ತಿದ್ದ ನಾನು ಇವತ್ತು ಮಾತ್ರ ತುಂಬಾ ಮೌನವಾಗಿತ್ತು. ಮೌನವನ್ನಾದರೂ ಮಾತಾಡಿಸಬಹುದು, ಆದರೆ ಈ ನಾನುವಿನ ಮೌನ ತುಂಬಾ ಅಸಹನೀಯ. ಇಬ್ಬರೂ ಹೋಗುತ್ತಿದ್ದೇವೆ ಹಿಂದು ಮುಂದಿಲ್ಲದ ದಾರಿಯಲ್ಲಿ....ಒಂದೊಂದೇ ಕವಲು ಕಾಣುತ್ತಿದೆ. ಏಷ್ಟೋ ಜನ ಜೊತೆಯಾಗುತ್ತಾರೆ, ಅವರ ಗುರಿ ಬರುವ ತನಕ. ಮತ್ತವರದೇ ಜಗತ್ತಿನಲ್ಲಿ ಮುಳುಗುತ್ತಾರೆ. ಕೆಲವೊಮ್ಮೆ ಹೀಗೆ ಜೊತೆಯಾಗುವ ಜನರಿಗಿಂಥ ಮೌನದ ಗೆಳೆತನ ಖುಷಿ ಕೊಡುತ್ತದೆ.
ಎದುರಿಗೆ ಆತುರ ಆತುರವಾಗಿ ಬಂದು ಹೋಗುವ ವಾಹನಗಳ ಶಬ್ದ ಕೇಳುತ್ತಿತ್ತು. ಮರಗಳ ನೆರಳಿನಲ್ಲಿ ನಡೆದು ಹೋಗುತ್ತಿರುವ ನಾನು ಈ ಶಬ್ದ ಕೇಳಿ ಬೆಚ್ಚಿಬೀಳುತ್ತಿದ್ದೆ. ಮರದ ಮೇಲೆ ಗೂಡಿಗೆ ಮರಳುತ್ತಿದ್ದ ಹಕ್ಕಿಗಳ ಚಿಲಿಪಿಲಿ, ವಾಹನಗಳ ಧ್ವನಿಯ ನಡುವೆ ಕೇಳದಷ್ಟು ಕರಗಿ ಹೋಗಿತ್ತು.
ನಾನು ಯಾವುದೋ ಭ್ರಾಂತಿಯಲ್ಲಿ ಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಒಬ್ಬ ವೃದ್ಧರು ರಸ್ತೆ ದಾಟಲು ಕಷ್ಟಪಡುತ್ತಿದ್ದರು. ಆವರು ರಸ್ತೆಯ ಆ ತುದಿಯಲ್ಲಿ. ನಾನು ರಸ್ತೆಯ ಈ ತುದಿಯಲ್ಲಿ. ಹೋಗಬೇಕೆನ್ನುವಷ್ಟರಲ್ಲಿ ಅವರೇ ಹೇಗೋ ಈಚೆಗೆ ಬಂದರು. ಮುಂದೆ ಒಂದು ಸಣ್ಣ ಹುಡುಗರ ಗುಂಪು ಕಾಲೇಜ್ ಎದುರಿಗಿತ್ತು. ರಜಾ ದಿನ ಆದರೂ ಅವರಲ್ಲಿ ಸೇರಿದ್ದರು. ಆವರ ಮುಖವೇ ಹೇಳುತ್ತಿತ್ತು, ಅವರಿನ್ನೂ ಸಣ್ಣ ವಯಸ್ಸಿನವರೆಂದು. ಆದರೆ ಹೆಚ್ಚಿನವರ ಕೈಯಲ್ಲಿ ಸಿಗರೇಟ್. ದಮ್ಮು ಹೊಡೆಯುತ್ತಿದ್ದ ಅವರನ್ನು ನೋಡಿ, ನನ್ನ ದಮ್ಮು ಒಂದು ಕ್ಷಣ ಹಾರಿ ಹೋಯ್ತು. ಇನ್ನೊಂದು ದಿನ ನಾ ನೋಡಿದ ಘಟನೆ ನೆನಪಿಗೆ ಬಂತು. ಆಫೀಸ್ ವಾಹನಕ್ಕಾಗಿ ನಿಂತಿದ್ದ ನನಗೆ ಒಬ್ಬ ಪುಟ್ಟ ಸೈಕಲ್ ಸವಾರ ಕಾಣಿಸಿದ. ಅವನು ೭-೮ ತರಗತಿಯಲ್ಲಿ ಓದುತ್ತಿರಬಹುದು. ಅವನು ಹಾಕಿದ ಸಮವಸ್ತ್ರ ಅದನ್ನು ಧೃಢಪಡಿಸುತ್ತಿತ್ತು. ಅವನ ಕೈಯಲ್ಲಿದ್ದ ಸಿಗರೇಟ್ ಅರ್ಧ ಸುಟ್ಟಿತ್ತು!!! ನನಗೆ ನಂಬಲಿಕ್ಕೆ ಆಗಲಿಲ್ಲ. ಮತ್ತೊಮ್ಮೆ ನೋಡುವಾಗ ಬಾಯಿಂದ ದಟ್ಟ ಹೊಗೆ ಬರುತ್ತಿತ್ತು!!! ನೋಡುತ್ತಿದ್ದಂತೆ ಅವ ಹೊರಟು ಹೋದ. ಈಗಲೂ ನನಗೆ ನಂಬಿಕೆ ಬರುತ್ತಿಲ್ಲ. ಇವರೆಲ್ಲ ಹೀಗೇಕೆ ಮಾಡುತ್ತಾರೆ ಅಂತ ಯೋಚಿಸುತ್ತ ಮುಂದೆ ಹೋದೆ.
ಸಣ್ಣದಾಗಿ ಸಂಗೀತ ಕೇಳುತ್ತಿತ್ತು. ನನಗರಿವಿಲ್ಲದೆಯೇ ಸಂಗೀತ ಕೇಳಿದ ಕಡೆ ನನ್ನ ಹೆಜ್ಜೆಗಳು ಹೊರಟವು. ಆದು ಬ್ಯೂಗಲ್ ರಾಕ್ ಉದ್ಯಾನವನ. ಕೆಲವೊಮ್ಮೆ ಸಂಗೀತ ಕಾರಂಜಿ ನೋಡಲು ಹೋಗುತ್ತಿದ್ದೆ. ಆ ದಿನ ಮಾತ್ರ ಚಿಕ್ಕ ಮಕ್ಕಳಿಂದ ಕೀ ಬೋರ್ಡ್ ನುಡಿಸುವ ಕಾರ್ಯಕ್ರಮ ಇತ್ತು. "ಆದರ್ಶ ಸುಗಮ ಸಂಗೀತ" ಏರ್ಪಡಿದ ಸಂಗೀತ ಸಂಜೆ ಅದಾಗಿತ್ತು. ಸ್ವಲ್ಪ ಹೊತ್ತು ಅಲ್ಲಿದ್ದು ಮತ್ತೆ ಗಾಂಧಿ ಬಝಾರಿನತ್ತ ಹೊರಟೆ. ಬೇಕಾದ ಕೆಲವು ವಸ್ತುಗಳನ್ನು ತೆಗೆದುಕೊಂಡು, "ಅಂಕಿತ"ದೊಳಗೆ ಹೊದೆ. ನನಗಿಷ್ಟವಾದ ಪುಸ್ತಕವೊಂದನ್ನು ಖರೀದಿಸಿ ವಾಪಸು ಹೊರಟೆ. ತುಂಬಾ ಬಾಯಾರಿಕೆ ಆಗುತ್ತಿತ್ತು. ಆಗಲೇ ಕತ್ತಲಾಗುತ್ತ ಬಂದಿತ್ತು. ಎಳನೀರು ಕುಡಿಯಲು ನಿಂತ ನನ್ನನ್ನು ಪುಟ್ಟ ಹುಡುಗಿ ಎಂಥದೋ ಆಸೆಯ ಕಣ್ಣುಗಳಿಂದ ನೋಡಿದಂತಾಯಿತು. ಭಾಗ ಮಾಡಿದ ಎಳನೀರ ಚಿಪ್ಪಿನಲ್ಲಿ ಏನಾದರೂ ಸಿಗುತ್ತದೇನೋ ಅಂತ ಹುಡುಕುತ್ತಿದ್ದಳು. ಅವಳ ಪುಟ್ಟ ಕೈಗಳು ಎಳನೀರು ಹಿಡಿಯುವಷ್ಟು ಶಕ್ಯವಾಗಿರಲಿಲ್ಲ. ಎದುರಿಗೆ ಸೇಬಿನ ಗಾಡಿ ನಿಂತಿತ್ತು. ರಸ್ತೆ ದಾಟಿ ಸೇಬು ತೆಗೆದುಕೊಂಡು ಈಚೆ ಬಂದೆ. ನನ್ನ ಕಣ್ಣುಗಳು ಆ ಹುಡುಗಿಗಾಗಿ ಹುಡುಕಾಡಿದವು. ಅವಳು ಎಲ್ಲೋ ಮಾಯವಾಗಿದ್ದಳು. ಅಲ್ಲೇ ಪಕ್ಕದಲ್ಲಿ ಒಂದು ಕಟ್ಟಡ ತಯಾರಾಗುತ್ತಿತ್ತು. ಅವಳು ಅಲ್ಲಿ ಕೆಲಸ ಮಾಡುವವರ ಮಗಳಿರಬಹುದು ಎಂದು ನನ್ನ ಊಹೆ. ಕಟ್ಟಡದ ಹತ್ತಿರ ಬೆಳಕಿನ ವ್ಯವಸ್ಥೆ ಅಷ್ಟಾಗಿ ಇರಲಿಲ್ಲ. ಹಾಗಾಗಿ ಅದರ ಹತ್ತಿರ ಹೋಗಲು ಭಯವಾಯಿತು. ಸ್ವಲ್ಪ ಹೊತ್ತು ಕಾದೆ. ಅವಳು ಬರುವಳೆಂದು. ಅವಳು ಬರಲೇ ಇಲ್ಲ. ತುಂಬಾ ಬೇಜಾರಾಯಿತು. ವಾಪಾಸು ಬರುತ್ತಿದ್ದೆ, ಇನ್ನೊಂದು ಮಗು ಕೈಯಲ್ಲಿ ಆಟಿಕೆ ಹಿಡಿದು, ಬಾಯಲ್ಲೇನೊ ಜಗಿಯುತ್ತ ಖುಷಿಯಾಗಿ ಅಪ್ಪ-ಅಮ್ಮರ ಜೊತೆ ಕುಣಿದು ಹೋಗುತ್ತಿತ್ತು. ಮತ್ತದೇ ಕತ್ತಲಲ್ಲಿ ಮಾಯವಾದವಳ ನೆನಪಾಯಿತು. ಕತ್ತಲು ಮತ್ತೂ ಜೋರಾಗುತ್ತಿತ್ತು. ಬೇಗ ಬೇಗನೆ ಮನೆ ತಲಪುವ ಯತ್ನ ಮಾಡಿದೆ. ಆ ದಾರಿಯಲ್ಲಿ ಬರುವುದು ನನಗೇನೋ ಖುಷಿ. ಸಾಧಾರಣವಾಗಿ ಎಲ್ಲ ಮನೆಗಳ ಮುಂದೆ ಪಾರಿಜಾತ ಗಿಡ, ತೆಂಗಿನ ಮರಗಳು ಇದ್ದವು. ಅಲ್ಲಿ ಯಾವಾಗಲೂ ಮಕ್ಕಳು ಆಡುತ್ತಿರುತ್ತಾರೆ. ಅವರ ಮುಗ್ಧ ನಗು, ತುಂಟ ಕಣ್ಣುಗಳನ್ನು ನೋಡಲೆಂದೇ ನಾನು ಆ ರಸ್ತೆಯಲ್ಲಿ ಬರುತ್ತೇನೆ. ಆ ದಿನ ಒಬ್ಬ ತಾಯಿ ತನ್ನ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು, ಹಾಡನ್ನು ಗುನುಗುತ್ತ, ಮಜ್ಜಿಗೆ ಅನ್ನವನ್ನು ಊಟ ಮಾಡಿಸುತ್ತಿದ್ದರು. ಕತ್ತಲಲ್ಲಿ ಅರಳುವ ಪಾರಿಜಾತದ ಸುಗಂಧವನ್ನು ದಾಟಿ ಈ ಮಜ್ಜಿಗೆ ಅನ್ನದ ಪರಿಮಳ ಮೂಗನ್ನು ತಲುಪಿ ಬಾಲ್ಯವನ್ನು ನೆನಪಿಗೆ ತಂದಿತು. ಅದೇ ಗುಂಗಿನಲ್ಲಿ ಹೆಜ್ಜೆ ಹಾಕುತ್ತಿದ್ದ ನನಗೆ ಹಾಸ್ಟೆಲಿನ ಗೇಟು ಸ್ವಾಗತ ಕೋರಿತು.
ಅಲ್ಲಿಯ ತನಕವೂ ನಾನು ಮೌನವಾಗಿತ್ತು. ರಾತ್ರಿ ಊಟ ಮಾಡಿ ಮಲಗಿದೆ. ಎಷ್ಟೋ ಹೊತ್ತಿನ ನಂತರ ನಿದ್ದೆ ಬಂತು. ನಾನು ಮಾತ್ರ ಗೂಡಿಗೆ ಮರಳುತ್ತಿದ್ದ ಹಕ್ಕಿಗಳ ಚಿಲಿಪಿಲಿ ಕೇಳುತ್ತಿತ್ತು. ವೃದ್ಧರ ಕೈಹಿಡಿದು ರಸ್ತೆ ದಾಟಿಸುತ್ತಿತ್ತು. ಸಿಗರೇಟ್ ಹಿಡಿದ ಮಹಾನುಭಾವರ ಬಗ್ಗೆ ಚಿಂತಿಸುತ್ತಿತ್ತು. ಎಲ್ಲರ ಜೊತೆಗೂಡಿ ಕೀ ಬೋರ್ಡನಲ್ಲಿ ಭಾವ ಗೀತೆ ನುಡಿಸುತ್ತಿತ್ತು. ಕತ್ತಲಲ್ಲಿ ಮಾಯವಾದವಳ ಕೈಗೆ ಸೇಬಿನ ಚೀಲವನ್ನಿತ್ತು, ಅವಳ ಖುಷಿಯಾದ ಕಣ್ಣುಗಳನ್ನು ನೋಡಿ ತೃಪ್ತಿ ಪಡುತ್ತಿತ್ತು. ಮಗುವಿನ ಜೊತೆ ನಾನು ಕುಪ್ಪಳಿಸುತ್ತಿತ್ತು. ಅಮ್ಮನ ಮಡಿಲೇರಿ, ಕಥೆ ಕೇಳುತ್ತ, ಮಜ್ಜಿಗೆ ಅನ್ನ ತಿನ್ನುತ್ತಿತ್ತು. ಕೊನೆಗೂ ನಾನು ನನ್ನ ಜೊತೆ ಆಗಲೇ ಇಲ್ಲ. ಗಡಿಯಾರ ಏಳಾಯಿತು ಏಳು ಎಂದಿತು. ಮತ್ತದೇ ಯಾಂತ್ರಿಕ ಬದುಕು ಪ್ರಾರಂಭವಾಯಿತು. ನಾನು ಮಾತ್ರ ಐದು ದಿನಗಳ ನಂತರದ ಬದುಕಿನ ಕನಸು ಕಾಣತೊಡಗಿತು. ನಾನು ಬೇಗ ಬೇಗನೆ ಆಫೀಸಿಗೆ ತಯಾರಾಗುತ್ತಿದ್ದೆ. " ಮತ್ತದೇ ಹೊಸ ಚೈತ್ರ, ಹೊಸ ಚಿಗುರು...." ಎಂಬ ಭಾವಗೀತೆ ಭಾವ ತುಂಬಿ ಬರುತ್ತಿತ್ತು.