Sunday, May 06, 2012

ಮರೆಯಲಾಗದ ಮಾಂತ್ರಿಕ ಬೆರಳುಗಳು!!!


ಅದೊಂದು ಅಪೂರ್ವ ಸಂಜೆ, ಹೇಳಿಕೊಳ್ಳಲಾಗದ ಅನುಭವ. ಹಿರಿಯ ಚೇತನ ಬೆಂಗಳೂರಿಗೆ ತನ್ನ ಸಿತಾರ್ ವಾದನದ ಮೂಲಕ ವಿದಾಯ ಹೇಳುವ ಸಮಯ. ಒಂದಷ್ಟು ಪ್ರೋತ್ಸಾಹಕರ, ಬೆಂಬಲಿಸಿದವರ ಮತ್ತು ಇಂಥ ಕಾರ್ಯಕ್ರಮಗಳಿಗೆ ಸಹಾಯ ಹಸ್ತ ಚಾಚಿದ ಸಂಸ್ಥೆಗಳ ಹೆಸರುಗಳಿಂದ ಪ್ರಾರಂಭವಾದ ಕಾರ್ಯಕ್ರಮ ಕ್ಷಣ ಕಾಲ ಪ್ರೇಕ್ಷಕರ ಸಂಯಮವನ್ನು ಪರೀಕ್ಷಿಸಿ ಮತ್ತೆ  ಅನೌಷ್ಕಶಂಕರ ತಂಡದ ಆಗಮನವನ್ನು ತಿಳಿ ಹೇಳುವದರ ಜೊತೆಗೆ ಅಧಿಕೃತವಾಗಿ "ಸಿತಾರ್ ವಾದನ" ಪ್ರಾರಂಭಗೊಂಡಿತು.


ತೊಂಬತ್ತೊಂದು ವರ್ಷದ ಮುದುಕರನ್ನು  ಮತ್ತೆ  ಪುನಃ ಬೆಂಗಳೂರಿನ ವೇದಿಕೆ ಮೇಲೆ ಕಾಣುವೆನೆಂಬ ನಂಬಿಕೆಯಿರಲಿಲ್ಲ.  ಹಾಗಾಗಿ ಕಾರ್ಯಕ್ರಮ ತಪ್ಪಿಸುವ ಪ್ರಮೇಯ ಇಲ್ಲವೇ ಇಲ್ಲ .  ತಂದೆ-ಮಗಳನ್ನು  ಪರಿಚಯಿಸಿದ ನಿರೂಪಕರು ನೈಪಥ್ಯ ಸೇರಿದ್ದರು. ನೆರೆದ ಜನರೆಲ್ಲಾ ಎದ್ದು ನಿಂತು ಪಂಡಿತ್ ರವಿಶಂಕರ್ ಅವರನ್ನು ಸ್ವಾಗತಿಸಿದರು.
ಮಗಳ ಸಿತಾರ್ ವಾದನ ಪ್ರಾರಂಭಗೊಂಡಿತು. ಕೆಲವು ಹಿಂದೂಸ್ತಾನಿ ಆಲಾಪಗಳ ಬಳಿಕ, ಕರ್ನಾಟಕ ಶಾಸ್ತೀಯ ಸಂಗೀತದ ಕೃತಿಯಲ್ಲೊಂದಾದ  "ರಘುವಂಶ ಸುಧಾ" ನುಡಿಸಲು ಶುರುಮಾಡಿದ ತಕ್ಷಣ ಸಭಿಕರೆಲ್ಲ ಕರತಾಡನಗೈದರು. ಅನೌಷ್ಕಶಂಕರ್   ಅದನ್ನು ನಗುತ್ತ  ಸ್ವೀಕರಿಸಿದರು. ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರಿಯ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನು ಮೈಗೂಡಿಸಿಕೊಂಡಿರುವುದು ಅವರ ಕಲಾಪ್ರತಿಭೆಗೆ ಸಾಕ್ಷಿ. ಅಪ್ಪನಿಂದಲೇ ಹೊಗಳಿಸಿಕೊಂಡ ಹೆಮ್ಮೆಯ ಮಗಳು. "ಮೈ ಮದರ್" ಎಂದು ತಪ್ಪಾಗಿ ನುಡಿದರೂ ಆನಂತರ "ಮೈ ಡಾಟರ್" ಅಂತ ಸಂಬೋಧಿಸಿದರು. ಒಂದು ರೀತಿಯಲ್ಲಿ ಅದು ಸರಿಯಾಗಿತ್ತು. ಒಳ್ಳೆಯ ಮಗಳಾಗಿ,ವಿದ್ಯಾರ್ಥಿನಿಯಾಗಿ,ವಯಸ್ಸಾದ ತಂದೆಯನ್ನು ಕೈಹಿಡಿದು, ತಾಯಿ ಮಗುವನ್ನು ಕರೆ ತರುವಂತೆ ವೇದಿಕೆಯ ಮೇಲೆ ಕರೆತಂದು, ತಂದೆಯ ಸಮಾನವಾಗಿ ನುಡಿಸಿದರೂ ಅವರ ಮುಖದಲ್ಲಿ ಆ ವಿನಯತೆ ಎದ್ದು ಕಾಣುತಿತ್ತು. ತಂದೆ ಮೊದಲಾರ್ಧ ಮಗಳಿಗೆ ಬಿಟ್ಟುಕೊಟ್ಟು ಎರಡನೆಯಾರ್ಧ ತಮ್ಮ ಸಿತಾರ್ ವಾದನ ಪ್ರಾರಂಭಿಸಿದರು.

"ಇಲ್ಲಿಯ ತನಕ ನೀವು ತುಂಬಾ ಕಿರಿಯರ,ತುಂಬಾ ಶಕ್ತರಾದ ನನ್ನ ಮಗಳ ಹಾಗೂ ಉಳಿದವರ ಕಛೇರಿ ಕೇಳಿದಿರಿ. ಈಗ ವಯಸ್ಸಾದ ನಿಧಾನಗತಿಯ ನನ್ನ ಸರದಿ"  ಅಂದರು. ಮಗಳು ಅದನ್ನು ಅಲ್ಲಗಳೆಯುತ್ತಾ ತಂದೆಗೆ ಬೇಕಾದಲ್ಲಿ ಸಾಥ್ ಕೊಟ್ಟರು. ಅಪ್ಪ ಯಮನ್ ಕಲ್ಯಾಣ್ , ತಿಲಕ್ ಶ್ಯಾಮ್, ಕಮಾಚ್(ಜ್) ಈ ರಾಗಗಳನ್ನು ನಿರರ್ಗಳವಾಗಿ, ಅದೂ ತನಗಿಂತ ೬೦ ವರ್ಷ ಚಿಕ್ಕವಳಾದ ಮಗಳ ಜೊತೆಯಲ್ಲಿ ನುಡಿಸುತ್ತಿದ್ದರೆ, ಮಗಳೋ ಸಿತಾರ್ ಹಿಡಿದೆ ಇಲ್ಲ ಎಂಬಂತೆ ಅನಾಯಾಸವಾಗಿ ನುಡಿಸುತ್ತಿದರು. ಅಪ್ಪನ ಮುಖದಲ್ಲಿ ವಯಸ್ಸು ಚೆಲ್ಲಿದ ಆಯಾಸದ ಕುರುಹು. ಆದರೂ ಅವರ ಅದಮ್ಯ ಚೇತನ ರಾತ್ರಿ ಹನ್ನೊಂದು ಘಂಟೆಯ ತನಕವೂ ನುಡಿಸುವಲ್ಲಿ ಸಫಲವಾಯಿತು.
ಅದೆಲ್ಲುವುಗಳ ಮಧ್ಯೆ ತಾವು ಮಾಡಿದ ಸಿತಾರ್ ಪ್ರಯೋಗ - ತಂತಿಯ ಮೇಲೆ ವಸ್ತ್ರ ಹಾಕಿ ವಿಭಿನ್ನ ರೀತಿಯಲ್ಲಿ ಸ್ವರ ಹೊರಡಿಸುವುದು - ಪ್ರದರ್ಶಿಸಿದರು.

ತಂದೆ ಮಗಳ ಜುಗಲ್ ಬಂಧಿ, ಮುಕ್ತಾಯದಲ್ಲಿ ಸಹಕಲಾವಿದರಿಗೆ ಅವಕಾಶ ಕೊಡುವದಕ್ಕಾಗಿ ಶಹನಾಯಿ, ಕೊಳಲು, ಮೃದಂಗ, ತಬಲಾ, ಮೊರ್ಸಿನ್ಗ್, ಕಂಜೀರಾ ಇವೆಲ್ಲವುಗಳ ಪ್ರತ್ಯೇಕ ಹಾಗು ಸಮ್ಮಿಶ್ರ ವಾದನ ಪ್ರದರ್ಶನಗೊಂಡಿತು. ಚಲನ ಚಿತ್ರಗಳಲ್ಲಿ, ದೇವರು ಪ್ರತ್ಯಕ್ಷವಾಗುವ ಮೊದಲು ಸಿತಾರ್ ವಾದನ ಜೋರಾಗುತ್ತದೆ. ಹಾಗೆಯೇ ಅವರ ಮತ್ತು ಮಗಳ ವಾದನ ತಾರಕಕ್ಕೇರಿತು.  ಜನರೆಲ್ಲಾ ಎದ್ದು ನಿಂತು ನಮಿಸುತ್ತಿದ್ದರು. ತೊಂಭತ್ತು ವರ್ಷ ತಲುಪುವಾಗ ಪ್ರಪಂಚದ ಅರಿವು ಇರುವುದು ಅಪರೂಪ. ಅಂಥದರಲ್ಲಿ ಅವರ ಮಾಂತ್ರಿಕ ಬೆರಳುಗಳ ಓಡಾಟ ಅದ್ಭುತ. ಆ ಬೆರಳುಗಳನ್ನ ಮರೆಯಲು ಸಾಧ್ಯವಿಲ್ಲ. ಇಳಿ ವಯಸ್ಸಲ್ಲು ಅವರು ತೋರುತ್ತಿದ್ದ ಉತ್ಸಾಹ, ಅವರ ತುಡಿತ, ತನ್ಮಯತೆ, ಎಲ್ಲವು ನಮಗೊಂದು ಮಾದರಿ. ಹೀಗೊಂದು ಮುಸ್ಸಂಜೆ/ರಾತ್ರಿ ಕಳೆದ ನನ್ನ ಆತ್ಮ ಆ ಕಲಾ ಚೇತನಕ್ಕೆ  ವಂದನೆ ಸಲ್ಲಿಸಿ ಸಂತೃಪ್ತಗೊಂಡಿತು.