Thursday, January 01, 2009

2009


ನಿಮಗೂ ನಿಮ್ಮ ಕುಟುಂಬದವರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Tuesday, October 02, 2007

ನನ್ನೊಳು ನೀ ನಿನ್ನೊಳು ನಾ!!!

ಕಣ್ಣಿನಲ್ಲಿ ಸೆರೆಹಿಡಿದ ಆ ಚಿತ್ರ ಮರೆಯಲಾಗುತ್ತಿಲ್ಲ!!! ಅದೆಂಥ ತನ್ಮಯತೆ, ತಾದ್ಯಾತ್ಮ!!! ಎಲ್ಲರೂ ಸುತ್ತುವರಿದು ನೋಡುತ್ತಿದ್ದರೂ ಅವಳು ಮಾತ್ರ ಅವನನ್ನು ಬಿಟ್ಟು ಬೇರೇನನ್ನು ನೋಡುತ್ತಿರಲಿಲ್ಲ. ಅವನು ಕೂಡ ಅವಳ ಮುಖವನ್ನೇ ನೋಡುತ್ತಿದ್ದ. ಹಾಗೆ ನೋಡುತ್ತಿದ್ದಂತೆ ಅವಳ ದೃಷ್ಟಿ ನಾಚಿ ಬಾಗಿದಂತೆ ಅನ್ನಿಸಿತು. ಅದು ತನ್ನ ಭ್ರಮೆ ಅಂತ ಖಾತರಿ ಮಾಡಿಕೊಳ್ಳುವವರೆಗೆ ಪುನಃ ಪುನಃ ಆ ಶಿಲ್ಪವನ್ನೇ ನೋಡಿದಳವಳು. ಆ ಶಿಲ್ಪಕಲಾ ಪ್ರದರ್ಶನದಲ್ಲಿ ಅಷ್ಟೊಂದು ಆಕರ್ಷಿಸಿದ ಶಿಲ್ಪ ಇನ್ನೊಂದಿಲ್ಲ. ಎಷ್ಟೋ ಶಿಲ್ಪಗಳನ್ನು ನೋಡಿದ್ದಿದೆ. ಆದರೆ ಇದರಷ್ಟು ಮನಃ ಕೆಡಿಸಿದ, ತೃಪ್ತಿ ನೀಡಿದ ಕಲಾಕೃತಿ ಇನ್ನೊಂದಿಲ್ಲ. ಅಮೃತ ಶಿಲೆಯಲ್ಲಿ ಕೆತ್ತಿದರೂ ಅದು ನಿಜವೋ ಎಂಬಂತೆ ಅದರಲ್ಲಿ ಭಾವನೆಗಳನ್ನು ತುಂಬಿದ್ದಾರೆ. ನಿಜಕ್ಕೂ ಅದರಲ್ಲಿ ಜೀವ ತುಂಬಿದವರನ್ನು ಮನಸಾರೆ ಅಭಿನಂದಿಸಿ, ಕಣ್ಣ್ಮುಚ್ಚಿ ಖರೀದಿಸಿ ಮನೆಗೆ ತಂದಳವಳು.

ನಡುಮನೆಯ ಕೊನೆಯಲ್ಲಿ ಇಟ್ಟ ಗಾಜಿನ ಟಿಪಾಯಿಯನ್ನಲಂಕರಿಸಿತು ಆ ಮೂರ್ತಿ. ಸೂರ್ಯ ತನ್ನ ಬೆಳಿಗ್ಗಿನ ಮೃದು ರಶ್ಮಿಯನ್ನು ಬಾಗಿಲ ಸಂಧಿಯಲ್ಲಿ ತೂರಿಸಿ, ಮಧ್ಯಾಹ್ನದ ಸುಡು ಬಿಸಿಲನ್ನು ಸೂರಿನ ಗಾಜಿನೊಳಗೆ ಹದವಾಗಿ ಹಾಯಿಸಿ, ಸಂಜೆಯ ಕೆಂಪುನ್ನು ಕಿಟಕಿಯಲ್ಲಿ ಕಳುಹಿಸಿ, ಆ ಮಂಗಳ ಮೂರ್ತಿಯನ್ನು ಸ್ಪರ್ಷಿಸುತ್ತಿದ್ದ. ರಾತ್ರಿಯ ಹಾಲು-ಬೆಳದಿಂಗಳ ನುಡುವೆಯೂ ಅದು ಎದ್ದು ಕಾಣುತ್ತಿತ್ತು. ಕೃತಕ ಬೆಳಕಿನ ವ್ಯವಸ್ಥೆ ಇದ್ದರೂ ನೈಜ ಬೆಳಕು ಆ ವಿಗೃಹದ ಮೇಲೆ ಬೀಳುವ ಹಾಗೆ ಇಟ್ಟಿದ್ದಳವಳು. ಆ ಮುಗ್ಧ, ದಿವ್ಯ, ವರ್ಣಿಸಲೇ ಕಷ್ಟವಾದ ರಾಧಾಕೃಷ್ಣ ಮೂರ್ತಿಯ ಎದುರು ಬಂದು ನಿಂತರೆ ಏನೋ ಒಂದು ಅವ್ಯಕ್ತವಾದ ಖುಷಿ ಅವಳಿಗೆ.

ದಿನವೂ ವೃಂದಾವನದಲ್ಲಿ ಎಲ್ಲರ ಕಣ್ತಪ್ಪಿಸಿ ಅವನಿಗಾಗಿ ಕಾಯುತ್ತಿದ್ದ ಅವಳ ಕಣ್ಣನ್ನು ಸದ್ದಿಲ್ಲದೆ ಬಂದು ಮುಚ್ಚುತ್ತಿದ್ದ. ಅವಳ ಹುಸಿ ಕೋಪವನ್ನು ತನ್ನ ಮುದ್ದು ಮುಖ ತೋರಿಸಿ ಓಡಿಸುತ್ತಿದ್ದ. ರಾಧೆ ತರುವ ಹಾಲನ್ನು ಕುಡಿಯಲು ಸತಾಯಿಸುತ್ತಿದ್ದ. ಕೋಲಾಟ ಆಡುವಾಗ ಬೇಕಂತಲೇ ತಪ್ಪು ಮಾಡಿ ಅವಳೇ ಕಲಿಸಲಿ ಅಂತ ಕಾಯುತ್ತಿದ್ದ. ತಪ್ಪಿಸಿ ಓಡುವ ಅವಳ ಜಡೆ ಹಿಡಿದು ಪಾರಿಜಾತ ಮುಡಿಸುತ್ತಿದ್ದ. ನಾಚಿ-ನೀರಾಗುವ ಅವಳ ಕಣ್ಣುಗಳನ್ನ ಹಾಗೆಯೇ ನಿಂತು ನೋಡುತ್ತಿದ್ದ. ತೊಡೆಯ ಮೇಲೆ ತಲೆಯಿರಿಸಿ, ತನ್ಮಯತೆಯಿಂದ ಕೊಳಲಗಾನ ಕೇಳುತ್ತಿದ್ದ ಅವಳ ಹಣೆಗೆ ಹೂಮುತ್ತಿಡುತ್ತಿದ್ದ. ಅವಳ ಮುಗ್ಧ ಬಟ್ಟಲು ಕಣ್ಣುಗಳಲ್ಲಿ ತನ್ನ ಪ್ರತಿಬಿಂಬ ಕಾಣುತ್ತಿದ್ದ.

ಅವಳೂ ಅಷ್ಟೆ, ಅಡಗಿ ಕುಳಿತು ಅವಳಿಗಾಗಿ ಹುಡುಕುವ ಕಣ್ಣುಗಳನ್ನು, ಸಿಗದಿದ್ದಾಗ ತೋರುವ ಅಸಹನೆಯನ್ನು ನೋಡಿ ಖುಷಿ ಪಡುತ್ತಿದ್ದಳು. ಹಾಲು, ಬೆಣ್ಣೆ-ಮೊಸರುಗಳನ್ನು ಅವನಿಗಾಗಿ ಮೀಸಲಿಡುತ್ತಿದ್ದಳು. ಅವುಗಳನ್ನು ತಿಂದು ಅವನು ಬೀರುವ ಒಂದು ಹೂನಗೆಗಾಗಿ ಕಾಯುತ್ತಿದ್ದಳು. ಅವನು ಬರುವ ದಾರಿಯಲ್ಲಿ ಹೂಹಾಸಿರುತ್ತಿದ್ದಳು. ಕೊಳಲ ಗಾನ ಕೇಳುತ್ತ ಅವನಲ್ಲಿ ಒಂದಾಗುತ್ತಿದ್ದಳು. ಅವನಿಗಿಷ್ಟವಾದ ಹೂಗಳನ್ನೇ ಆರಿಸಿ, ಹೂಮಾಲೆ ಕಟ್ಟಿ, ಅವನ ಕೊರಳಲ್ಲಿಟ್ಟು, ವಿಶಾಲ ವಕ್ಷದಲ್ಲಿ ತನ್ನನ್ನು ಹುದುಗಿಸುತ್ತಿದ್ದಳು. ಕೃಷ್ಣನ ಎದುರಲ್ಲಿ ಮಾತ್ರ ರಾಧೆ ಹೆಣ್ಣಾಗುತ್ತಿದ್ದಳು.

ರಾಧೆಯ ಕಣ್ಣುಗಳಲ್ಲಿ ಸೂಸುವ ಸಮರ್ಪಣೆ, ಕಷ್ಣನ ತುಂಟ ಕಣ್ಣುಗಳಲ್ಲಿ ಹೊಳೆಯುವ ಮಧುರ ಪ್ರೀತಿ ಬಹುಷಃ ಮತ್ತೆಲ್ಲು ನೋಡದಂತೆ ಅವಳನ್ನು ಆ ಪ್ರತಿಮೆಯ ಎದುರಿಗೆ ಕಟ್ಟಿಹಾಕಿದೆ.

ರಾಧೆ ಹಿಡಿದಿರುವ ಪ್ರತಿಯೊಂದು ಹೂವು ಹೇಳುತ್ತಿದೆ, "ರಾಧೆ ಕೃಷ್ಣನವಳು, ಕೃಷ್ಣ ರಾಧೆಯವನು" ಅಂತ. ಕದ್ದು ನೋಡುವ ಅವನ ಕಣ್ಣುಗಳಲ್ಲಿ ರಾಧೆಯೇ ಕಾಣುತ್ತಿದ್ದಳು. ಕೃಷ್ಣ ಆಡದ ಪ್ರತಿಯೊಂದು ಮಾತು ರಾಧೆಗಷ್ಟೇ ಕೇಳುತ್ತಿದೆ. ಅವನ ಮೌನದ ನೋಟದಲ್ಲೂ ಪ್ರೀತಿ ಉಕ್ಕುತ್ತಿದೆ. ಏನೂ ಹೇಳದೆ ಎಲ್ಲ ಅರ್ಥವಾಗಿದೆ!!!

Friday, August 17, 2007

ಕಲಾ ಸಂಸ್ಕಾರ

"ಗೋಖಲೆ ವಿಚಾರ ಸಂಕೀರ್ಣ" (ಬಸವನಗುಡಿ ರಸ್ತೆ)... ಇಲ್ಲಿ ಯಾವಾಗಲೂ ಎನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತದೆ. ಸಂಜೆ ೬.೩೦ ಕ್ಕೆ ಪ್ರಾರಂಭವಾದರೆ ಮುಗಿಯುವುವಾಗ ಸಾಧಾರಣ ೭.೩೦ - ೮.೦೦. ಹೆಚ್ಚು ಅಂದರೆ ೮.೩೦ ಎಲ್ಲ ಕಾರ್ಯಕ್ರಮಗಳಿಗೆ ಮಂಗಳ ಮುಗಿದಿರುತ್ತದೆ. ಆಫೀಸಿನಿಂದ ಬರುವಾಗಲೇ ೭.೩೦ ಆಗುವುದರಿಂದ ವಾರದ ಕಾರ್ಯಕ್ರಮಗಳಿಗೆ ನಾನು ಗೈರು ಹಾಜರಾಗಿರುತ್ತೇನೆ. ಆದರೆ ವಾರಂತ್ಯದಲ್ಲಿರುವ ಒಳ್ಳೆಯ ಕಾರ್ಯಕ್ರಮಗಳಿಗೆ ಭೇಟಿ ಕೊಡುತ್ತೇನೆ.


"ಏಕವ್ಯಕ್ತಿ ಯಕ್ಷಗಾನ ಪ್ರಾತ್ಯಕ್ಷಿಕೆ" - ಪ್ರಭಾಕರ ಉಪಾಧ್ಯ, ಶತಾವಧಾನಿ ಡಾ||ಗಣೇಶ ಮತ್ತು ತಂಡದವರಿಂದ. (೨/೦೬/೦೭ ರಿಂದ ೭/೦೬/೦೭ರ ವರೆಗೆ). ಮೊದಲ ದಿನ ತಪ್ಪಿ ಹೋದದ್ದರಿಂದ ಎರಡನೆಯ ದಿನ ತಪ್ಪಿಸಿಕೊಳ್ಳದೆ ಭಾಗಿಯಾದೆ. "ಭಾಮಿನಿ" - ವಿವಿಧ ಶೃಂಗಾರ ರಸದಿಂದ ಕೂಡಿದ ಹಾಡಿಗೆ ಉಪಾಧ್ಯರು ತುಂಬಾ ಚೆನ್ನಾಗಿ ಕುಣಿದರು. ಮೊದಲ ಬಾರಿಗೆ ಶಿವರಾಮ ಕಾರಂತರ ನವೋದಯ ಯಕ್ಷಗಾನದ ಶೈಲಿಯನ್ನು ಪ್ರತ್ಯಕ್ಷವಾಗಿ ಕಾಣುವ ಭಾಗ್ಯ ನನ್ನದು. ಯಕ್ಷಗಾನಕ್ಕೆ ವಯೋಲಿನ್ ಅಳವಡಿಸಿ, ಹಾವ-ಭಾವ, ಭಂಗಿಗಳನ್ನು ಸ್ವಲ್ಪ ಭರತನಾಟ್ಯದಿಂದ ಅನುಕರಿಸಿ ಪ್ರಸ್ತುತ ಪಡಿಸಿದ್ದರು. ವೀರಾವೇಶದ ಯಾವ ಪದಗಳು ಅಷ್ಟಾಗಿ ಇರಲ್ಲಿಲ್ಲ. ಸಾಂಪ್ರದಾಯಿಕ ಯಕ್ಷಗಾನ ನೋಡಿದ್ದ ನನಗೆ ಇದು ಸ್ವಲ್ಪ ಭಿನ್ನ ಅನಿಸಿತು. ಶೃಂಗಾರ ರಸ ಪ್ರದರ್ಶಿಸಿದರೂ ಭಾಗವತರ ಹಾಡಿನಲ್ಲಿ ದೇಹದ ಯಾವ ಅಂಗಗಳ ವರ್ಣನೆ ಇರಲ್ಲಿಲ್ಲ. ಶತಾವಧಾನಿಗಳ ಪ್ರಕಾರ, ಈ ಶೃಂಗಾರ ರಸ ಅಲೌಕಿಕವಾದದ್ದು. ಲೌಕಿಕವಲ್ಲ, ಭೌತಿಕವಲ್ಲ. ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸಿ ಹೇಳುವ "ಭಾಮಿನಿ-ಅಭಿಸಾರಿಕೆ"ಯನ್ನು ಅವರು ವಿಶ್ಲೇಷಿಸಿದ ರೀತಿ ಅಮೋಘವಾದದ್ದು. ಈ ಶೃಂಗಾರ ರಸವನ್ನು ಯಾರು ಹೇಗೆ ಬೇಕಾದರೂ ತೆಗೆದುಕೊಳ್ಳಬಹುದು. ಅದು ಅವರವರ ಮನಃ-ಸಂಸ್ಕಾರಕ್ಕೆ ಬಿಟ್ಟದ್ದು ಎಂದರು. ನಿಜವಾಗಲೂ ಉಪಾಧ್ಯಾಯರ ಕುಣಿತ, ಶತಾವಧಾನಿಗಳ ವಿಶ್ಲೇಷಣೆ ಎರಡೂ ಅವರ್ಣನೀಯ.

ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಹೆಣ್ಣು ತನ್ನ ಗಂಡನ ಬರವನ್ನು ನಿರೀಕ್ಷಿಸುವ ಬಗೆಯನ್ನು ಅವನಿಗಾಗಿ ಹಾತೊರೆಯುವ, ಪರಿತಪಿಸುವ, ಆಕ್ಷೇಪಿಸುವ, ರೀತಿಯನ್ನು ಪದ್ಯ-ನೃತ್ಯಗಳೆರಡರಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಪ್ರಕೃತಿಯ ಬದಲಾವಣೆಯ ಜೊತೆ ಜೊತೆಗೆ ಭಾಮಿನಿಯ ಮನಃಸ್ಥಿತಿಯ ಬದಲಾವಣೆಗಳನ್ನು ಹಳದಿ, ಹಸಿರು, ಕಡು ನೀಲಿ , ಬಿಳಿ ಬಣ್ಣದ ವೇಷ-ಭೂಷಣಗಳಲ್ಲಿ ಬಿಂಬಿಸಿದ್ದಾರೆ. ಅರುಣರಾಗದೊಂದಿಗೆ ಶುರುವಾದ ಗೀತೆ, ಮರುದಿನದ ಅರುಣರಾಗದೊಂದಿಗೆ ಕೊನೆಗೊಳ್ಳುತ್ತದೆ.






ಮಾರನೇ ದಿನ ಮಣಿಪುರದ ಮಾನಿನಿ (ಪೂತನಿ ಸಂಹಾರ)- ಇಲ್ಲಿ ಪೂತನಿಯ ರಾಕ್ಷಸೀ ಸ್ವಭಾವ ಮತ್ತು ಶ್ರೀಕೃಷ್ಣನ ಮೇಲಿನ ಭಕ್ತಿಯ ಮೂಲಕ ಅವಳ ಮನಸ್ಸಿನ ದ್ವಂದ್ವವನ್ನು ಪ್ರಕಟಿಸಿದರೆ, ಯಕ್ಷನವೋದಯ - ಡಿವಿಜಿಯ "ಅಂತಃಪುರ ಗೀತೆಗಳು", ಪುತಿನ{?}ರ "ಪತಿಕ" ಇವುಗಳ ಮೂಲಕ ರಸಿಕತೆಯನ್ನು ತೋರಿಸಿದರು. ಕೆ.ಸ್.ನರಸಿಂಹ ಸ್ವಾಮಿಯವರ "ಹತ್ತುವರುಷದ ಹಿಂದೆ..." ಮೂಲಕ "ನೀನನಗೆ-ನಾನಿನಗೆ"(ಪು.ತಿ.ನ), "ಸಖಾ ಸಪ್ತಶತಿಃ"(ಭವಭೂತಿ) - ಏಳು ಹೆಜ್ಜೆಯಲ್ಲಿ ಕೊನೆಯ ಹೆಜ್ಜೆ, ಸ್ನೇಹದ ಹೆಜ್ಜೆ ಅಂತ ಉದಾಹರಣೆ ಕೊಡುತ್ತ ಭಾರತೀಯ ಸಂಸ್ಕೃತಿಯಲ್ಲಿ ದಾಂಪತ್ಯ ಅಂದರೆ ಏನು ಅಂತ ವಿವರಿಸಿದರು. ಕುವೆಂಪು ಅವರ "ವೃಂದಾವನದೊಳು ಹಾಲನು ಮಾರಲು..." ಮೂಲಕ ರಾಧೆಯ ಶೃಂಗಾರ ಮತ್ತು ಆತ್ಮಸಮರ್ಪಣೆಯ ಜೊತೆಗೆ ಅಧ್ಯಾತ್ಮವನ್ನು ತೋರಿಸಿದರು.


ಮತ್ತೊಂದು ದಿನ ಪ್ರಣಯವಂಚಿತೆ ಅಂಬೆಯನ್ನು ಪ್ರಪ್ರಥಮ ಭಾರಿ ರಂಗಮಂಚದಲ್ಲಿ ಪ್ರದರ್ಶಿಸಿದರು. ಇಲ್ಲಿ ಕೂಡ ರಸಿಕತೆಯಿಂದ ಪ್ರಾರಂಭಿಸಿ ಅಂಬೆಯ ಜೀವನವನ್ನು, ಪ್ರಣಯ ವಂಚಿತಳಾದುದನ್ನು, ವರಪಡೆದು ಭೀಷ್ಮನ ಮರಣಕ್ಕೆ ಕಾರಣವಾಗಿ, ಕೊನೆಗೂ ಜೀವಂತ ದಹನವಾಗುವುದನ್ನು ಮಾರ್ಮಿಕವಾಗಿ ತೋರಿಸಿದ್ದಾರೆ.

ಶತಾವಧಾನಿಗಳು ಆಯ್ದುಕೊಂಡಿರುವ ಎಲ್ಲ ಗೀತೆಗಳನ್ನು ಲೌಕಿಕದಲ್ಲಿ ಮೊದಲುಗೊಂಡು, ಅಧ್ಯಾತ್ಮದಲ್ಲಿ ಕೊನೆಗೊಳ್ಳುವಂತೆ ಮಾಡಿ ಎಲ್ಲ ಕಲಾರಸಿಕರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿದ್ದಾರೆ. ಕೊನೆಯ ದಿನದ "ಪ್ರಣಯ ವಂಚಿತೆ"ಯ ದಹನದಿಂದ ಉರಿಗೊಂಡ ಮನಸ್ಸನ್ನು ತಣಿಸಲು ಎಲ್ಲ ಕಲಾ ಬಾಂಧವರಿಗೆ ಮಂಟಪ ಐಸ್-ಕ್ರೀಂ ಹಂಚಿದರು.

ಶತಾವಧಾನಿಗಳ ಸಂಯೋಜನೆ-ನಿರೂಪಣೆ, ಉಪಾಧ್ಯರ ಅಮೋಘ ನೃತ್ಯ ಶೈಲಿ, ಕವಿತೆಗಳ ಆಯ್ಕೆ, ಶೃಂಗಾರವನ್ನು ಎಲ್ಲೂ ಕಲಾಮರ್ಯಾದೆ ಮೀರದಂತೆ ಮಂಡಿಸುವುದು ಎಲ್ಲವೂ ಅವರ ಕಲಾಸಂಸ್ಕಾರವನ್ನು ಎತ್ತಿ ಹಿಡಿದಿವೆ. ಹೀಗೊಂದು ವಾರಾಂತ್ಯ ಕಳೆದ ನನ್ನ ಮನಸ್ಸು ಕೂಡಾ ಸಂತೃಪ್ತಿಗೊಂಡಿತು. ಶತಾವಧಾನಿಗಳು ನನ್ನ ಕ್ಯಾಮರಕ್ಕೆ ನಿಂತಭಂಗಿ ಹೀಗಿದೆ...

"ವಿದ್ಯಾಂ ವಿನಯಂ ದಧಾತಿ" - ಶತಾವಧಾನಿಗಳಂಥವರನ್ನು ನೋಡಿಯೇ ಹೇಳಿರಬೇಕು.

Tuesday, June 26, 2007

ಒಡೆದ ಕನ್ನಡಿಯಿಂದ....

ಈ ಕಾಲವೇ ಹೀಗೆ!!!...ಯಾವುದನ್ನೂ ನಿಖರವಾಗಿ ಹೇಳಲಿಕ್ಕಾಗುವುದಿಲ್ಲ. ಇಡೀ ವಾತವರಣದಲ್ಲೇ ಗೊಂದಲ. ಯಾವಾಗ ಜೋರಾಗಿ ಮಳೆ ಹೊಯ್ಯುವುದೋ, ಯಾವಾಗ ಬಿಸಿಲ ಝರಿ ಝಳಪಿಸುವುದೋ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಯಾವುದೂ ಯಾರ ನಿಯಂತ್ರಣದಲ್ಲಿ ಇರಲಿಲ್ಲ.
ಅವನು ಆಗ ತಾನೇ ಕಲಿಯಲಿಕ್ಕೆ ಅಂತ ಹೋದ ಸ್ಠಳದಿಂದ ವಾಪಾಸು ಬಂದಿದ್ದ. ಎಲ್ಲವೂ ಅವ್ಯವಸ್ಥಿತವಾಗಿ ತೋರುತಿತ್ತು. ಎಂಥದೋ ಅಸಹನೆ, ಹೇಳಿಕೊಳ್ಳಲಾಗದ ಮನಸ್ಥಿತಿ. ತುಂಬಾ ಸಮಯದ ಮನಸ್ಸಿನ ಹೊಯ್ದಾಟ, ಒಂದು ನಿರ್ಧಾರಕ್ಕೆ ಬಂದು ಶಾಂತವಾಯಿತು. ಆ ನಿರ್ಧಾರ, ಭೂಮಿಯ ಜೊತೆಗಿನ ಸಂಬಂಧ ಕಿತ್ತೊಗೆಯುವ, ಎಲ್ಲ ನೊವು-ನಲಿವುಗಳಿಂದ ಮುಕ್ತಿ ಪಡೆಯುವ, ಚಿರ-ನಿದ್ದೆಯಲ್ಲಿ ಮುಳುಗಿ ಶಾಂತವಾಗುವ ನಿರ್ಧಾರ!!!! ಯಾವುದೇ ಕಾರಣಕ್ಕೂ ಈ ನಿರ್ಧಾರ ಅಲುಗಾಡಬಾರದೆಂಬ ದೃಢತೆಯನ್ನು ಚಂಚಲ ಮನಸ್ಸಿಗೆ ತಿಳಿಹೇಳುತ್ತಿದ್ದ.
ಯಾವಾಗಲೂ ಅವನು ಈ ಜಗತ್ತಿನ ಬಗ್ಗೆ ಯೋಚಿಸುತ್ತಿದ್ದ. ಎಲ್ಲ ಜನರು ಅನುಭವಿಸುತ್ತಿರುವ ನೋವು, ಮನಸ್ಸನ್ನೂ ಕೂಡ ದುರ್ಬಲ ಮಾಡುವ ಶಕ್ತಿಯುಳ್ಳ ಈ ನೋವು, ಇದಕ್ಕೊಂದು ಪರಿಹಾರ ಕಂಡು ಹಿಡಿಯಲೇ ಬೇಕೆಂದು ಅವನು ಅದಕ್ಕೆ ಸಂಬಂಧಪಟ್ಟ ಅಭ್ಯಾಸದಲ್ಲಿ ತೊಡಗಿದ್ದ. ಕೆಲವರಿಗಾದರೂ ಸಹಾಯ ಮಾಡಬೇಕೆಂಬ ಉತ್ಕಟ ಬಯಕೆ. ಯಾವಾಗ ಈ ನೋವು ಇವನ್ನನ್ನೇ ದಹಿಸಿತೊ ಅವನ ಕ್ರಿಯಾಶೀಲ ಮನಸ್ಸು ತನ್ನ ಹಿಡಿತ ಕಳೆದುಕೊಂಡಿತು. ಎಲ್ಲ ಆಸಕ್ತಿಗಳು ಮೊಳಕೆಯಲ್ಲಿಯೇ ಬಾಡಿ ಹೋದವು. ಆದರೂ ಆ ದಿನದ ನಿರ್ಧಾರ ಮಾತ್ರ ಅಚಲ ಎಂಬ ನಂಬಿಕೆ ದಿನೇ ದಿನೇ ದೃಢಗೊಳ್ಳುತ್ತಿತ್ತು.
ನಿರ್ಧಾರದ ದಾರಿಯ ಆಯ್ಕೆ ಮಾತ್ರ ಗಾಳಿ ಬಂದ ದಿಕ್ಕಿನ ಜೊತೆ ಬದಲಾಗುತ್ತಿತ್ತು. ಯಾವ ಹಾದಿ ಯಾರ ಗಮನವನ್ನು ಸೆಳೆಯದೆ ಕೊನೆ ತಲುಪುವಲ್ಲಿ ಸಹಾಯ ಮಡಬಹುದೆಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿದ್ದ. ಒಂದು ಮಾತ್ರ ಎಲ್ಲರ ಗಮನ ಕಡಿಮೆ ಸೆಳೆಯುವಲ್ಲಿ ಯಶಸ್ವಿಯಾಯಿತು. ಅದರ ನೀಲ-ನಕಾಶೆಯ ಚಿತ್ರಣ ತಯಾರಾಗತೊಡಗಿತು. ದಿನಗಳು ಹತ್ತಿರವಾಗುತ್ತಿದ್ದವು. ಕೊನೆಗೂ ನಿರ್ಧರಿತ ದಿನ ಬಂದಿತು. ಸೂರ್ಯ ಪಶ್ಚಿಮದ ಕಡೆ ಮುಖ ಮಾಡಿದ್ದ. ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳು ಸಿದ್ಧವಾಗಿದ್ದವು. ಚಿರಶಾಂತಿಯ ಜಾಗ ಯಾರೂ ಇಲ್ಲದೆ ಪ್ರಶಾಂತವಾಗಿತ್ತು. ಒಂದೊಂದೇ ಅಸ್ತ್ರ ದೇಹ ಪ್ರವೇಶಿಸಿದಾಗ, ವಿಜಯ ತನ್ನದೇ ಎನ್ನುವ ಉತ್ಸಾಹ ಹೆಚ್ಚಾಗುತ್ತಿತ್ತು.
ಅಂಗಾತವಾಗಿ ಮಲಗಿರುವ ಆತನಿಗೆ ಶುಭ್ರ ನೀಲಾಕಾಶ ಸ್ಪಷ್ಟವಾಗಿ ಕಂಡಿತು. ಮನಸ್ಸು ಸದ್ದಿಲ್ಲದೆ ಬಾಲ್ಯಕ್ಕೆ ಹಾರಿತು. ಬಾಲ್ಯದಲ್ಲಿ ನೀಲಾಕಾಶವನ್ನು ತುಂಬು ಹೃದಯದಿಂದ ನೋಡುತ್ತಿದ್ದ. ಆಕಾಶವೇ ರಂಗ ಮಂದಿರದಂತೆ... ಅಲ್ಲಿ ಬಾಲ್ಯದ ಪ್ರತಿ ದೃಶ್ಯಗಳು ಹಾದು ಹೋಗುತ್ತಿದ್ದವು. ಅಕ್ಕ, ನಾನು, ಅವಳು ಶಾಲೆಗೆ ಒಟ್ಟಿಗೆ ಹೋಗಿ ಬರುತ್ತಿದ್ದೆವು. ನಾನು, ಅವಳು ಒಂದೇ ತರಗತಿ. ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುತ್ತಿದ್ದೆವು. ನಾವು ಅಣ್ಣ-ತಂಗಿಯರಂತೆ ಬೆಳೆದರೂ, ಶಾಲೆಯಲ್ಲಿ ಒಬ್ಬರಿಗೊಬ್ಬರು ಮಾತು-ಕತೆಯಿಲ್ಲ. ಶಾಲೆಗೆ ಹೋಗುವಾಗ-ಬರುವಾಗ ಚರ್ಚಿಸದ ವಿಷಯವೇ ಇಲ್ಲ. ಜಗಳ ಕೆಲವೊಮ್ಮೆ ೧-೨ ದಿನಗಳ ಮೌನದೊಂದಿಗೆ ಕೊನೆಗೊಳ್ಳುವುದು ರೂಢಿ. ಅವಳು ಮಾತನಾಡದೆ ಮೌನವಾಗಿರುವುದು ತುಂಬಾ ಕಡಿಮೆ. ಅಕ್ಕನಿಗೋಸ್ಕರ ನಾವಿಬ್ಬರು ಶನಿವಾರ ಕಾದು ನಿಂತಿರುತ್ತಿದ್ದೆವು. ಅಕ್ಕ ತೆಗಿಸಿ ಕೊಡುವ ಮಿಠಾಯಿ, ಐಸ್-ಕ್ಯಾಂಡಿ, ಪೇರಳೆ, ಹಣೆ-ಕಣ್ಣು, ಕಡಲೆ, ಬಟಾಣಿಗಳಿಗಾಗಿ. ಮಳೆರಾಯನ ಅಬ್ಬರವನ್ನು ಓಲೆ ಕೊಡೆ ಹಿಡಿದು ತಡೆಯುತ್ತಿದ್ದ ರೀತಿ, ಕೆಸುವಿನ ಎಲೆಯ ಮಧ್ಯೆ ಕಲ್ಲಿಟ್ಟು ನೀರಿನಲ್ಲಿ ಬಿಟ್ಟು ಅದರ ಹಿಂದೆ ಓಡುತ್ತಿದ್ದ ನಾವು, ದುಂಬಿಯ ರೆಕ್ಕೆಗೆ ಹೂಕಟ್ಟಿ ಅದನ್ನು ಹಿಂಬಾಲಿಸುತ್ತಿದ್ದ ನಾವುಗಳು, ಟೀಚರ್ ಕೊಟ್ಟ ಖರ್ಜೂರವನ್ನು ಇಬ್ಬರೇ ಮುಗಿಸಿ ಅಮ್ಮನಿಂದ ಬೈಸಿಕೊಂಡ ನಾವುಗಳು, ಅವಳ ಚೀಲಕ್ಕೆ ಒಂದೊಂದೇ ಕಲ್ಲು ಹಾಕಿ, ಮೌನವಾಗಿ ಹಿಂಬಾಲಿಸಿ, ಅವಳು ಪುಸ್ತಕ ಹೊರತೆಗೆಯುವಾಗ ಸಿಗುವ ಕಲ್ಲುಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದ ಅವಳನ್ನು ನೋಡುವಾಗ ನನಗೇನು ಗೊತ್ತಿಲ್ಲ ಎಂಬಂತೆ ನಟಿಸುತ್ತಿದ್ದೆ. ನಾವು ಬಂಜೆ ತೆಂಗಿನ ಕಾಯಿ ಕಟ್ಟಿಕೊಂಡೋ, ಬಾಳೆ ದಿಮ್ಮಿ ಇಟ್ಟುಕೊಂಡೋ ಈಜು ಕಲಿತ್ತದ್ದು, ಹತ್ತು ಸಲ ಬಿದ್ದು ಸೈಕಲ್ ಬಿಟ್ಟದ್ದು, ನೀಲಾಕಾಶದಲ್ಲಿ ಮೇಷ, ವೃಷಭ, ಕನ್ಯಾ ಇತ್ಯಾದಿ ರಾಶಿ ಗುರುತಿಸಿದ್ದು, ಧ್ರುವ, ಅರುಂಧತಿ ನಕ್ಷತ್ರಗಳನ್ನು ಅವಳಿಗಿಂತ ಮೊದಲು ನಾನೇ ಗುರುತಿಸಿ ಹೆಮ್ಮಯಿಂದ ಬೀಗಿದ್ದು.... ಹೀಗೆ ಒಂದೇ - ಎರಡೇ.... ದಿನವೂ ನಾವು ಒಂದಲ್ಲ ಒಂದು ವಿಚಾರ ಚರ್ಚಿಸಿ ಬರುತ್ತಿದ್ದ ರೀತಿ ಎಷ್ಟು ಖುಷಿ ಕೊಡುತ್ತಿತ್ತು. ನಾನು ಓದಿದ ಹೊಸ ಪುಸ್ತಕದ ವಿವರಣೆ ಅವಳ ಮುಂದೆ ಇರುತ್ತಿತ್ತು. ಅವಳು ನನ್ನೊಂದಿಗೆ ಚರ್ಚೆಗೆ ಇಳಿಯುತ್ತಿದ್ದಳು. ಮತ್ತೆ ನಾವು ಬೇರೆ ಮನೆಗೆ ಬಂದದ್ದು.. ಪರೀಕ್ಷೆಯ ಸಮಯದಲ್ಲಿ ಇಬ್ಬರು ಒಟ್ಟಿಗೆ ಓದಿದ್ದು.... ನಂತರ ನಾವಿಬ್ಬರೂ ಬೇರೆ ಬೇರೆ ಅಭ್ಯಾಸದಲ್ಲಿ ತೊಡಗಿದ್ದು... ಎಲ್ಲ ದೃಶ್ಯಗಳು ಒಂದರ ಹಿಂದೆ ಒಂದರಂತೆ ಕಾಣತೊಡಗಿದವು.
ಈಗ ಶುಭ್ರ ಆಕಾಶದಲ್ಲಿ ಸಣ್ಣ ಸಣ್ಣ ಮೋಡಗಳು ಕಾಣಿಸ ತೊಡಗಿದವು. ಸಣ್ಣ ಮೋಡಗಳಿಗೇನು? ಯಾರ ಭಯವಿಲ್ಲದೆ, ಯಾವುದೇ ಜವಾಬ್ದಾರಿಯೂ ಇಲ್ಲದೆ ಇಷ್ಟ ಬಂದ ದಿಕ್ಕಿನಂತೆ ಓಡುತ್ತ, ಮುಂದಿನ ಕಲ್ಪನೆಯಿಲ್ಲದೆ ಕೇಕೆ ಹಾಕುತ್ತಿದ್ದವು. ಆದರೆ ಅವು ಯಾವಾಗಲೂ ಅದೇ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ. ದೊಡ್ಡದಾಗಲೇ ಬೇಕು. ಕೆಲವು ಜವಾಬ್ದಾರಿಗಳನ್ನು ಸ್ವೀಕರಿಸಲೇಬೇಕು. ತಮ್ಮ ಜೊತೆಗೆ ನೀರನ್ನು ಕೊಂಡಯ್ಯಲೇ ಬೇಕು. ತಮ್ಮ ಅವಸಾನದ ಜೊತೆಗೆ ನೀರನ್ನು ಈ ಜಗತ್ತಿಗೆ ಉಣಿಸಿ, ಹೊಸ ಮೋಡಗಳ ಸೃಸ್ಟಿಗೆ ಕಾರಣವಾಗಲೇ ಬೇಕು. ಅದೇ ಪ್ರಕೃತಿ ನಿಯಮ. ಯೌವ್ವನ ಭರಿತ ಮೋಡಗಳಿಗೆ ನಾಳೆಯ ಕಲ್ಪನೆ ಇರುವುದಿಲ್ಲ. ಒಂದೇ ಹುಚ್ಚು. ಹೊಸ ಪ್ರಪಂಚ ನೋಡುವ ಹುಚ್ಚು. ಹೊಸ ಜೀವನ ತಿಳಿಯುವ ಹುಚ್ಚು. "ಜೀವನ ಸಂಜೆಯಲ್ಲಿ ಈ ಎಲ್ಲ ಹುಚ್ಚಿನ ಅರ್ಥಗಳು ಸ್ಪಷ್ಟವಾಗುತ್ತ ಹೋಗುತ್ತವೆ." ಆದರೆ ಸಿಡಿಲುಗಳಲ್ಲಿ ಕೊನೆಗೊಳ್ಳುವುದು ಯಾರೂ ಇಷ್ಟ ಪಡುವುದಿಲ್ಲ. ಈ ಮೋಡಗಳಿಗೆ ಜವಾಬ್ದಾರಿಯುತ ಜೀವನ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ತಾಳ್ಮೆಯೂ ಇರುವುದಿಲ್ಲ. ಸಿಡಿಲು-ಮಿಂಚುಗಳಲ್ಲಿ ಕೊನೆಗೊಳ್ಳುತ್ತವೆ.
ಜೀವನವೂ ಅಷ್ಟೆ, ಮೈಯಲ್ಲಿ ಶಕ್ತಿಯಿದ್ದಷ್ಟು ದಿನ ಉತ್ಸಾಹಿಯಾಗಿರುತ್ತದೆ, ಯಾವುದಕ್ಕೂ ಹೆದರುವುದಿಲ್ಲ. ಶಕ್ತಿಗುಂದಿದಾಗ, ಇನ್ನೊಬ್ಬರ ಮೇಲೆ ಅವಲಂಬಿತವಾಗಬೇಕಾದಾಗ ಎಲ್ಲವೂ ಕಷ್ಟ ಅನಿಸುತ್ತದೆ. ಸಂಜೆಯು ಶಾಂತಿ-ನೆಮ್ಮದಿಯಲ್ಲಿರಬೇಕಾದರೆ ಹಗಲಿಡೀ ಎಚ್ಚರದಲ್ಲಿರಬೇಕು, ಕಷ್ಟಪಡಬೇಕು.
ಈಗ ಮೋಡಗಳು ದೊಡ್ಡದಾಗುತ್ತಿವೆ. ಕಪ್ಪಿನ ದಟ್ಟತೆ ತೀವ್ರಗೊಳ್ಳುತ್ತಿದೆ. ದೇಹದೊಳಗಿನ ಅಸ್ತ್ರಗಳ ತಿವಿತದಿಂದ ಸಣ್ಣ ನೋವು ಪ್ರಾರಂಭವಾಯಿತು. ಮೋಡಗಳು ಅತ್ತಿಂದಿತ್ತ ಓಡಾಡ ತೊಡಗಿದವು. ಅವನ ಮನಸ್ಸಿನ್ನು ಅರ್ಥ ಮಾಡಿಕೊಳ್ಳುವಷ್ಟು ಎಚ್ಚರದಲ್ಲಿತ್ತು. ಆದರೀಗ ನೋವು ತುಂಬಾ ಜಾಸ್ತಿಯಾಗ ತೊಡಗಿತು. ಹುಚ್ಚು ಮೋಡವೊಂದು ಹೊಯ್ದಾಟ ಪ್ರಾರಂಭಿಸಿತು. ಈ ಕಷ್ಟ, ನೋವುಗಳು ಸಹಜ. ಹುಟ್ಟು-ಸಾವುಗಳು ಪ್ರಕೃತಿ ನಿಯಮ. ಕಷ್ಟದಲ್ಲೇ ಖುಷಿ ಕಾಣಬಹುದು. ಕಷ್ಟ-ಸುಖಗಳ ಚಕ್ರ ತಿರುಗುತ್ತಿರುತ್ತದೆ. ಆತ್ಮವು ಸಂತೋಷವಾಗಿದ್ದರೆ ಇಡೀ ಜಗತ್ತೇ ಖುಷಿಗೊಂಡಂತೆ ಅನ್ನಿಸುತ್ತದೆ. ಸುಖ-ದುಖಃಗಳೆರಡೂ ನಮ್ಮೊಳಗಿದೆ. ನಾವು ತೆಗೆದುಕೊಳ್ಳುವ ರೀತಿಯಲ್ಲಿದೆ. ತನ್ನ ನಿರ್ಧಾರದಲ್ಲಿದೆ. ಎಲ್ಲ ನೋವುಗಳಲ್ಲೂ ನಲಿವು ಇದ್ದೇ ಇದೆ. ತಾಯಿಯ ಹೆರಿಗೆ ಬೇನೆಯಲ್ಲೂ ಮಗುವಿನ ಹುಟ್ಟಿನ ಸಂತೋಷವಿದೆ. ಬದುಕು ಇವುಗಳಿಲ್ಲದೆ ಅಪೂರ್ಣ. ಬದುಕು ಒಂದು ಚೈತನ್ಯ...ಬದುಕಲೇಬೇಕು.
ಮೋಡಗಳ ಹೊಯ್ದಾಟ ಹೆಚ್ಚಾದವು. ಒಂದಕ್ಕೊಂದು ಮೋಡಗಳ ತಾಕಲಾಟದಿಂದ ಹೊಸ ಮಿಂಚೊಂದು ಹುಟ್ಟಿತು. ಈ ಮಿಂಚು, ಅವನ ಕಣ್ಣು ಕುಕ್ಕಿತು. ಕಣ್ಣಿಂದ ನರ-ನಾಡಿಗಳಲ್ಲಿ ಚಲಿಸಿ ರಕ್ತದಲ್ಲಿ ಸೇರಿ ಹೃದಯ, ಮಿದುಳು ನಂತರ ಇಡೀ ದೇಹವನ್ನು ಪ್ರವೇಶಿಸಿತು. ಬದುಕಿನ ಹೊಸ ಅರ್ಥ, ಹೊಸ ಕಲ್ಪನೆಯನ್ನು ತೋರಿಸಿತು. ಬದುಕಿನ ಈ ಚೈತನ್ಯ, ನೋವುಗಳೊಂದಿಗೂ ಬದುಕಬಹುದೆಂಬ ಸತ್ಯವನ್ನು ಪ್ರಜ್ವಲಿಸಿತು. ಈ ಬೆಳಕು ಎಷ್ಟು ಪ್ರಖರವಾಗಿತ್ತೆಂದರೆ, ಶುಭ್ರವಾದ, ನಿಶ್ಚಲವಾದ, ನಿರ್ಧಾರದ ಕನ್ನಡಿಯನ್ನು ಒಡೆಯಿತು. ನೋವು ತೀವ್ರವಾಯಿತು. ಉಸಿರಾಟ ಕಷ್ಟವಾಯಿತು.
ಅಪ್ಪ-ಅಮ್ಮ ಎಲ್ಲರೂ ಕಣ್ಮುಂದೆ ತೇಲಿ ಬಂದರು. ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದಾರೆ. ಅವರ ಕಡೆಗೆ ಮನಸ್ಸು ಓಗೊಡುತ್ತಿದೆ. ಆದರೆ ದೇಹ ಸಹಕರಿಸುತ್ತಿಲ್ಲ. ಓಡಿ ಅವರನ್ನೆಲ್ಲ ಸೇರಿಕೊಳ್ಳಬೇಕೆಂದು ಮನಸ್ಸು ಬಯಸುತ್ತಿದೆ...ಬದುಕಬೇಕೆಂದು ಚಡಪಡಿಸುತ್ತಿದೆ...ಕ್ಷಣ ಕ್ಷಣಕ್ಕೂ ನೋವು ಹೆಚ್ಚಾಗುತ್ತಿದೆ. ಇಡೀ ದೇಹ ಜೀವಂತವಾಗಿ ದಹಿಸುವಂತಾಗುತ್ತಿದೆ...ಇಷ್ಟವಾದ ಖರ್ಜೂರವೂ ಹೊಟ್ಟೆ ತಣಿಸುವಲ್ಲಿ ಸಫಲವಾಗಲಿಲ್ಲ. ಹೊಟ್ಟೆಯ ಬೇಗೆಗೆ ಹಿಡಿದ ನೀರಿನ ಬಾಟಲಿ ಖಾಲಿಯಾಗಿ ಅಪ್ಪಚ್ಚಿಯಾಗಿ ನನ್ನಂತೆ ಕಾಣುತ್ತಿತ್ತು. ಅಪ್ಪ ಕೊಟ್ಟ ವಾಚು, ಪವಿತ್ರದ ಉಂಗುರ ಬೇರೆ ಬಟ್ಟೆಯಲ್ಲಿ ಭದ್ರವಾಗಿ ಮೈಲಿಗೆ ಆಗದಂತೆ ಅವರಿಗಾಗಿ ಕಾಯುತ್ತಿತ್ತು...ಮನಸ್ಸು ಪುಟ್ಟ ಮಗುವಾಗಿ ಅಮ್ಮನ ಮಡಿಲೇರ ಬಯಸುತ್ತಿದೆ, ಅಕ್ಕ ನಾನು ಬರುವುದು ತಡವಾಯಿತೆಂದು ಕಾಯುತ್ತ ನಿಂತಿದ್ದಾಳೆ, ಅವಳು ನನ್ನನ್ನು ಕರೆದು ಕರೆದು ಮಾತನಾಡಿಸುತ್ತಿದ್ದಾಳೆ..ಎಲ್ಲವೂ ಮಂಜು ಮಂಜಾಗಿ ಕಾಣುತ್ತಿದೆ. ಕಣ್ಣು ಕತ್ತಲೆ ಆಗುತ್ತಿದೆ. ಮನಸ್ಸು ಕಾಣದ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಒಮ್ಮೆ ಬದುಕಿಸೆಂದು ಕೇಳಿಕೊಂಡಿತು.
ಮೋಡಗಳ ಆರ್ಭಟ ತುಂಬ ಹೆಚ್ಚಾಗುತ್ತಿದೆ. ಎಲ್ಲೆಲ್ಲು ಕತ್ತಲೆ....ಕರಾಳ ಕತ್ತಲೆ!!! ಬೆಳಕಿನ ಸುಳಿವೇ ಇಲ್ಲ...ಒಂದು ನೋವು ಅಮ್ಮಾ ಎಂದು ಚೀರಿತು. ಕೂಗು ಹೊರಗೆ ಬರಲೇ ಇಲ್ಲ. ಕತ್ತಲಾಕಾಶದಲ್ಲಿ ಮೋಡ ಒಡೆದು ಮಳೆ ಧೋ ಎಂದು ಸುರಿಯಿತು. ದೇವರ ಮನೆಯ ದೀಪ ನಂದಿತು. ಜೊತೆಗೆ ಬದುಕಿನ ಚಡಪಡಿಕೆ ಕೂಡ.. ಕನ್ನಡಿ ಹಿಡಿದ ಅವಳ ಕೈ ನಡುಗಿತು. ಕೈ ಜಾರಿ ಬಿದ್ದು ಚೂರು-ಚೂರಾಯಿತು. ಒಡೆದ ಕನ್ನಡಿಯಿಂದ ಬದುಕಿನ ಈ ಹೋರಾಟ ಸ್ಪಷ್ಟವಾಗಿ ಕಂಡಿತು. ಅವಳ ಅಳು ಮಳೆಯ ನೀರಿನೊಂದಿಗೆ, ದನಿ ಮಳೆಯ ಧೋಕಾರದೊಂದಿಗೆ ಲೀನವಾಯಿತು. ಮತ್ತೆಂದೂ ಕನ್ನಡಿ ಹಿಡಿಯುವ ಧೈರ್ಯ ಅವಳಿಗೆ ಬರಲಿಲ್ಲ... ಅವಳ ಮನದಲ್ಲಿ ಕಣ್ಣೀರು ಈಗಲೂ ಮುಗಿಲಾಗಿ-ಮಳೆಯಾಗಿ ಸುರಿಯಿತ್ತಿದೆ.

ಋತು ಚಕ್ರ ತಿರುಗುವುದು, ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭ ಧರಿಸುವಳು, ಮತ್ತುದಿಸುವುದು ಜೀವ
ಸತತ ಕೃಷಿಯೋ ಪೃಕೃತಿ ಮಂಕುತಿಮ್ಮ -- ಎಂದು ಬರೆದ ಡಿ.ವಿ.ಜಿ.ಯೂ ಕಾಲ ಗರ್ಭದಲ್ಲಿ ಒಂದಾಗಿದ್ದಾರೆ.

"ಸಾವು ಹುಟ್ಟಿನ ಮೂಲ. ಈ ಪ್ರಪಂಚದಲ್ಲಿ ಕಾಲ ಚಕ್ರ ಹುಟ್ಟು-ಸಾವುಗಳ ನಡುವೆ ಹೊಸ ನೆನಪುಗಳನ್ನು ಕೊಡುತ್ತ ತಿರುಗುತ್ತಿರುತ್ತದೆ."

Monday, April 09, 2007

A Few more shots from my camera

Tuesday, February 27, 2007

"ಕ(ಪಿ)ವಿ ಮಹಾಶಯ"

ಈ ಲೇಖನ ನಾನು ಪದವಿ ತರಗತಿಯಲ್ಲಿ ಓದುತ್ತಿರುವಾಗ ಬರೆದದ್ದು.. ಸ್ವಲ್ಪ ಬದಲಾವಣೆಗಳೊಂದಿಗೆ ಇಲ್ಲಿದೆ...

"ಕವಿಗಳು" ಎಂದ ತಕ್ಷಣ ಸಾಧಾರಣವಾಗಿ ನೆನಪಿಗೆ ಬರುವುದು ಜುಬ್ಬ-ಪೈಜಾಮ ಧರಿಸಿದ, ಮಾರುದ್ದದ ಜೋಳಿಗೆ ಹಿಡಿದ, ಬಾಯ್ತುಂಬ ಎಲೆ-ಅಡಿಕೆ(ತಾಂಬೂಲ) ಹಾಕಿದ, ಮುಖದ ತುಂಬಾ ಗಡ್ಡ ಹೊಂದಿದ ವ್ಯಕ್ತಿ. ಸಭೆ-ಸಮಾರಂಭಗಳಲ್ಲಿ ಕಾಣ ಸಿಗುವ ಈ ಕವಿಗಳು ಒಳ್ಳೆಯ ಗೌರವ ಹೊಂದಿರುತ್ತಾರೆ ಎನ್ನುವುದು ನನ್ನ ನಂಬಿಕೆ ಆಗಿತ್ತು. ಅವರಂತೆ ನಾನು ಕೂಡ "ಕವಿ" ಎನ್ನುವ ಪಟ್ಟ ಪಡೆದು ಫಲ-ತಾಂಬೂಲದೊಂದಿಗೆ ಮನೆಗೆ ಬರಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದಕ್ಕೆ ಬೇಕಾದ ಸಿದ್ಧತೆ ನಡದೇ ಇತ್ತು. ಆ ಕನಸನ್ನು ನನಸಾಗಿಸಲು ಪ್ರಯತ್ನಿಸಿದ್ದು ಒಂದೆರಡು ಬಾರಿಯಲ್ಲ. ಜುಬ್ಬ-ಪೈಜಾಮ, ಸಣ್ಣ ಜೋಳಿಗೆ, ಎಲೆ-ಅಡಿಕೆ ಜೊತೆಗೆ ಹೊಗೆಸೊಪ್ಪು(ಇದರಲ್ಲಿ ಒಂದು ಕೈ ಮುಂದೆ), ಕುರುಚಲು ಗಡ್ಡಕ್ಕೇನೂ ಕೊರತೆ ಇಲ್ಲ(ಸೋಮಾರಿಗಳಿಗೆ ಇದು ಕಷ್ಟವೇ ಅಲ್ಲ). ಹೊರ ನೋಟಕ್ಕೆ ಕವಿಯ ತದ್ರೂಪಿಯ ಸೃಷ್ಟಿ ಆಯಿತು...ಆದರೆ ಸುಮ್ಮನೇ ಕವಿಯ ಪಟ್ಟ ದೊರಕೀತೇ? ಇಲ್ಲ.. ಒಂದೆರಡು ಕವನ ಗೀಚ ಬೇಡವೆ? ನಾನು ನನ್ನ ಸ್ನೇಹಿತರೊಂದಿಗೆ ಈ ಕನಸಿನ ಕುರಿತಾಗಿ ಬಹಳ ಚರ್ಚಿಸಿದ್ದೆ. ಮಾರನೇ ದಿನವೇ ಕವನ ಬರೆಯುವುದಾಗಿ ಪಂಥ ಬೇರೆ ಕಟ್ಟಿದ್ದೆ. ಕೊನೆಗೆ ಮರ್ಯಾದೆ ಉಳಿಸಿಕೊಳ್ಳಲು ಕವನ ಬರೆಯಲು ಶುರು ಮಾಡುವ ನಿರ್ಧಾರಕ್ಕೆ ಬಂದೆ.

ನಮ್ಮೂರಲ್ಲಿ ಮಂಗಗಳು ಬಹಳ. ನವಿಲಿನ ನರ್ತನ, ಹಂದಿ-ನರಿಗಳ ಓಡಾಟ ಕೆಲವೊಮ್ಮೆ ನೋಡಬಹುದು. ಪೃಕೃತಿಯ ಮಡಿಲು ಅನೇಕ ಕವಿಗಳಿಗೆ ಸ್ಪೂರ್ತಿ ನೀಡಿದ್ದು ಓದಿ ತಿಳಿದಿದ್ದೆ. ಹಾಗೆ ಗುಡ್ಡದ ಕಡೆ ಪುಸ್ತಕ-ಪೆನ್ನುಗಳ ಜೊತೆ ಹೊರಟೆ. ಒಂದು ದೊಡ್ಡ ಮರದ ನೆರಳಿನಲ್ಲಿ ಕುಳಿತೆ. ತಾಂಬೂಲದೊಂದಿಗೆ ಹೊಗೆಸೊಪ್ಪು ಬೇರೆ ಸೇರಿ ಒಂದು ತರಹದ ಹೊಸ ಅನುಭವ ನೀಡುತ್ತಿತ್ತು. ಯಾರೋ-ಎಲ್ಲೋ ಓದಿದಂತೆ-ಹೇಳಿದಂತೆ ನೆನಪು. "ಕವನ ಹಾಗೆ ಬರೆಯುತ್ತೇನೆಂದರೆ ಬರುವುದಿಲ್ಲ. ಭಾವನೆಗಳ ಅಲೆಗಳು ಮನಸಿಗಪ್ಪಳಿಸಿದಾಗ ಕವನವೆಂಬ ನೀರು ಚಿಮ್ಮುವುದು." ಪುಸ್ತಕ-ಪೆನ್ನು ಕೈಯಲ್ಲಿತ್ತು. ಏನಾದರು ಭಾವನೆ ಬರುತ್ತದೇನೋ ಅಂತ ಕಾಯುತ್ತ ಕುಳಿತೆ. ಎಷ್ಟು ಹೊತ್ತು ಕುಳಿತರೂ ಒಂದು ಶಬ್ದ ಕೂಡ ಬರಲಿಲ್ಲ. ಮಧ್ಯಾಹ್ನದ ಊಟ ಆಗಿತ್ತು. ಮೂಡಣದ ಕಣ್ಣು ಪಡುವಲದತ್ತ ವಾಲಲು ಶುರು ಆಗಿತ್ತು. ಅದರ ಜೊತೆ ನನ್ನ ಕಣ್ಣು ಕೂಡ..... ಗಡದ್ದಾಗಿ ತಿಂದು ಹೋಗಿದ್ದರಿಂದ, ತಣ್ಣನೆಯ ಗಾಳಿಗೆ ನಿದ್ದೆ ಬರಲು ಶುರು ಆಯಿತೇ ವಿನಃ ಮತ್ತೇನು ಬರಲಿಲ್ಲ. ನನಗೇ ಅರಿವಿಲ್ಲದಂತೆ ಪುಟಗಟ್ಟಲೆ ಗೀಚಿದ ಹಾಗೆ, (ಮಹಾಕವಿ ಕಾಳೀದಾಸ -ಚಿತ್ರ ಬೀರಿದ ಮಾನಸಿಕ ಪರಿಣಾಮ - ಕಾಣದ ಕೈ ಸಹಾಯ ನನಗೂ ಒಲಿದಂತೆ...) ಎಲ್ಲರ ಎದುರಲ್ಲಿ ಹಾರ ಹಾಕಿಸಿಕೊಂಡು, ಶಾಲು ಹೊದೆಸಿಕೊಂಡು, ಫಲ-ತಾಂಬೂಲಗಳೊಂದಿಗೆ ಸತ್ಕರಿಸಿಕೊಂಡು ಬೀಗುತ್ತಿರುವಾಗ...ಮೈಮೇಲೆ ನೀರು ಬಿದ್ದ ಅನುಭವ. ಯಾರೋ ಮಹಾನುಭಾವರು ನನ್ನ ಮೇಲೆ ಸುಗಂಧ ದ್ರವ್ಯದ ಸಿಂಚನ ಮಾಡುತ್ತಿರಬಹುದು ಅಂತ ತುಂಬಾ ಖುಶಿ ಪಟ್ಟೆ. ಯಾರಿಗೂ ಇಲ್ಲದ ಸನ್ಮಾನ ನನಗೆ!!! ಹ ಹ ಹ.... ಪುನಃ ಸಿಂಚನ...ಈಗ ಸಾಧಾರಣದಿಂದ ಭಾರಿ ಪ್ರಮಾಣದಲ್ಲಿ....ನಾನೀಗ ಸಂಪೂರ್ಣವಾಗಿ ಈ ಲೋಕದಲ್ಲಿದ್ದೆ....ಅದೂ ಮರದ ಕೆಳಗೆ ಕುಳಿತ್ತಿದ್ದೆ...ಶಾಲು, ಫಲ-ತಾಂಬೂಲ ಎಂಥದ್ದು ಬಳಿಯಲ್ಲಿಲ್ಲ...ಆದರೆ ಸಿಂಚನ ಮಾತ್ರ ಸತ್ಯ.. ಅಪವಿತ್ರ ಪವಿತ್ರೋವಾ...ಪುಣ್ಯದ ನೀರನ್ನು ಪುರೋಹಿತರು ದರ್ಬೆ ಹಿಡಿದು ಪ್ರೋಕ್ಷಣೆ ಮಾಡಿದ ಹಾಗೆ!!!!! ಇಲ್ಲಿ ಅದು ಸಾಧ್ಯವಿಲ್ಲ........ ಹತ್ತಿರದಲ್ಲ್ಯಾರೂ ಕಾಣಲಿಲ್ಲ. ಸುತ್ತಲೂ ಕಣ್ಣಾಡಿಸಿದೆ. ಯಾವ ಯಕ್ಷ-ಗಂಧರ್ವ, ಕಿನ್ನರ ಕಿಂಪುರುಷ, ದೇವಾನು-ದೇವತೆಗಳಾಗಲಿ, ದೆವ್ವ-ಭೂತಗಳಾಗಲಿ ಪ್ರತ್ಯಕ್ಷ ಆಗಲಿಲ್ಲ.

ಹಾಗಾದರೆ ಈ ಕೆಲಸ ಯಾರದ್ದು??? ಮೇಲಿಂದ ಟರ್..ಟರ್...ಅನ್ನುವ ದನಿ ಕೇಳಿತು. ಈಗ ಎಲ್ಲ ಸ್ಪಷ್ಟವಾಯಿತು. ಮೇಲೆ ನೋಡಿದರೆ ಮಂಗಗಳ ಹಿಂಡು. ಇನ್ನೊಮ್ಮೆ ಪವಿತ್ರ ಅಪವಿತ್ರೋವ ಆಗುವ ಮೊದಲು ಅಲ್ಲಿಂದ ಓಡಿದೆ . ನನ್ನನ್ನು ಎಬ್ಬಿಸಿದಕ್ಕೆ ಮಂಗಗಳಿಗೆ ಧನ್ಯವಾದ ಹೇಳುವುದು ಅನಿವಾರ್ಯವಾಯಿತು. ಮನೆಯಲ್ಲಿ ನಾನಿಲ್ಲವೆಂಬ ಗೌಜು ಬಿದ್ದಿರುತ್ತದೆನೋ!!!ಈ ಭರದಲ್ಲಿ ನಾನು ಯಾವಾಗ ತಾಂಬೂಲದ ನೀರು ನುಂಗಿದೆನೋ ನಂಗೆ ಗೊತ್ತಿಲ್ಲ.. ಸಣ್ಣಗೆ ತಲೆ ಗಿರ್ ಅನ್ನಲಿಕ್ಕೆ ಶುರು ಆಯಿತು... ಬೇಗ ಬೇಗ ಮನೆಕಡೆ ನಡೆದೆ...

ದೊಪ್...ಅಂಗಳದಲ್ಲಿ ಬಿದ್ದದೊಂದೇ ಗೊತ್ತು...ಕಣ್ಣು ಬಿಡುವಾಗ ಅಡುಗೆ ಮನೆಯಲ್ಲಿ ಅಂಗಾತ ಮಲಗಿದ್ದೆ. ಪಿಳಿ ಪಿಳಿ ಕಣ್ಣು ಬಿಟ್ಟು ಅಟ್ಟ ನೋಡುತ್ತಿದ್ದೆ. ಅಮ್ಮ ಕೈಯಲ್ಲಿ ಮಜ್ಜಿಗೆ ನೀರು ಹಿಡಿದು ನನ್ನ ಬಾಯಿಗೆ ಹಾಕುತ್ತಿದ್ದರು. ಜೊತೆಗೆ ಗಾಳಿ ಕೂಡ. ಬೇಕಿತ್ತ ಈ ಅವಸ್ಥೆ??? (ಅಮ್ಮ ಕೇಳಲಿಲ್ಲ ಅಸ್ಟೆ).

ಮಾರನೇ ದಿನ ಈ ಘಟನೆ ಉತ್ಪ್ರೇಕ್ಷೆಗೊಂಡು ರೆಕ್ಕೆ-ಪುಕ್ಕಗಳೊಂದಿಗೆ ನನ್ನ ಗೆಳೆಯರೆದುರು ಪ್ರಕಟವಾಯಿತು. ಅಂತು ನನ್ನ ಬಹುದಿನದ ಕನಸು ನನಸಾಯ್ತು. ಹೇಗೆ ಗೊತ್ತೇ??? ಗೆಳೆಯರು ಕೊಟ್ಟ ಬಿರುದಿನಿಂದ.... "ಕವಿ ಮಹಾಶಯ" ಎನ್ನುವ ಬದಲಾಗಿ "ಕಪಿ ಮಹಾಶಯ" ಅಂತ ಕರೆದದ್ದರಿಂದ!!! :)

Monday, February 19, 2007

On those innocent eyes....

As we grow, we lose the innocence of childhood.
My camera eyes always look around for those innocent eyes..

Are you taking my photo ???

I won't give this doll to you....

How is my new skirt ??? matching with background right ???

Am I so naughty ;) !!!
Innocent smile :)
Are you going to take my BALL ???? no :(
How about this style ???

Cute isn't it :)